top of page

ಕಾರಿಥಾಸ್ ಉದ್ದೇಶಿಸಿ ವಿಶ್ವಗುರುಗಳ ಮಾತು: ಯುವಜನರ ಜೀವನ ವ್ಯಾಯಾಮ ಶಾಲೆ ಆಗುವಂತಾಗಲಿ.

Writer's picture: BangaloreArchdioceseBangaloreArchdiocese

ಕಾರಿಥಾಸ್ ಇಟಲಿಯ ಸಂಸ್ಥೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಅದರ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ತಮ್ಮ ಸೇವೆಯ ಪಯಣವನ್ನು ಮುಂದುವರಿಸಲು ಮೂರು ಮಾರ್ಗ ಸೂತ್ರಗಳನ್ನು ಸೂಚಿಸಿದರು.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ಬರಹಗಾರರಿಂದ


ಕಾರಿಥಾಸ್ ಇಟಲಿಯ ಸದಸ್ಯರನ್ನು ಉದ್ದೇಶಿಸಿ ಶನಿವಾರ ವ್ಯಾಟಿಕನ್‌ನ ಆರನೇಯ ಪೌಲ್ ಹಾಲ್‌ನಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ರವರು, ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು "ಚರ್ಚ್‌ನ ಜೀವಂತ ಭಾಗ" ಎಂದರು. 50 ವರ್ಷಗಳ ಹಿಂದೆ ಸಂಘಟನೆಯನ್ನು ಸ್ಥಾಪಿಸಿದ ಆರನೇಯ ಪೌಲ್ ರವರು “ನೀವು ನಮ್ಮ ಕಾರಿಥಾಸ್ (ದಾನ ಧರ್ಮ)" ಎಂಬ ಮಾತನ್ನು ಉಲ್ಲೇಖಿಸಿದರು. “ಆರನೇಯ ಪೌಲ್ ರವರು ಎರಡನೇ ವ್ಯಾಟಿಕನ್ ಮಹಾ ಸಮ್ಮೇಳನದ ಆಶಯದಂತೆ ದಾನದ ಸಾಕ್ಷಿಯನ್ನು ಉತ್ತೇಜಿಸುವ ಗುರುಗಳ ಅಂಗ ಸಂಸ್ಥೆಯೊಂದನ್ನು ಸ್ಥಾಪಿಸಲು ಧರ್ಮಾಧ್ಯಕ್ಷರುಗಳ ಸಮಾವೇಶಕೆ ಪ್ರೋತ್ಸಹಪೂರ್ವಕ ಕರೆ ನೀಡಿದರು. “ಆ ಮೂಲಕ ಕ್ರೈಸ್ತ ಸಮುದಾಯವು ದಾನದ ಕೇಂದ್ರ ವಿಷಯವಾಗುತ್ತದೆ. ಆ ಕೆಲಸಗಳನ್ನು ನಾನು ದೃಢಪಡಿಸುತ್ತೇನೆ. ಸದಾ ಬದಲಾಗುತ್ತಲೇ ಇರುವ ಈ ಸಂದರ್ಭಗಳಲ್ಲಿ ಅನೇಕ ಸವಾಲುಗಳು ಮತ್ತು ತೊಂದರೆಗಳಿವೆ. ಈ ಕಾರ್ಯ ವ್ಯಾಪ್ತಿಯಲ್ಲಿ ಬಡವರ ಮುಖಗಳು ಹಾಗೂ ಸಂಕೀರ್ಣ ಸನ್ನಿವೇಶಗಳು ಹೆಚ್ಚಾಗಿವೆ "ಎಂದು ವಿಶ್ವಗುರುಗಳು ಹೇಳಿದರು.


ಅತ್ಯಂತ ದುರ್ಬಲರ ಮಾರ್ಗ

“ಈ ವಾರ್ಷಿಕೋತ್ಸದ ಸಂದರ್ಭವು ಒಂದು ಮೈಲಿಗಲ್ಲು” ಎಂದು ಹೇಳುತ್ತಾ ವಿಶ್ವಗುರು ಫ್ರಾನ್ಸಿಸ್ "ಈ ಪ್ರಯಣದಲ್ಲಿ ಮುಂದುವರಿಯಲು" ಮೂರು ಮಾರ್ಗಗಳನ್ನು ಸೂಚಿಸಿದರು. ಮೊದಲನೆಯದು ’ಅತಿ ದುರ್ಬಲರ ಮಾರ್ಗ’ ಎಂದ ವಿಶ್ವಗುರುಗಳು, “ಅತಿ ದುರ್ಬಲ ಮತ್ತು ರಕ್ಷಣೆಯಿಲ್ಲದವರಿಂದ ಇದರ ಪ್ರಾರಂಭ" ಎಂಬುದಾಗಿ ತಿಳಿಸಿದರು. "ದಾನವು ಅತ್ಯಂತ ದುರ್ಬಲರನ್ನು ಅತ್ಯಂತ ಕಷ್ಟಕರವಾದ ಸ್ಥಳಗಳಿಂದ ಹುಡುಕಿ ಸಹಾಯ ಮಾಡುವ ಕರುಣಾಭರಿತ ಕ್ರಿಯೆಯಾಗಿದೆ. ಜನರನ್ನು ದಬ್ಬಾಳಿಕೆಗೆ ಒಳಪಡಿಸುವ ಗುಲಾಮಗಿರಿಯಿಂದ ಮುಕ್ತಗೊಳಿಸಿ, ಅವರನ್ನು ತಮ್ಮ ಜೀವನಕ್ಕೆ ತಾವೇ ಪ್ರಮುಖ ಪಾತ್ರಗಳನ್ನಾಗಿ ಮಾಡುತ್ತದೆ” ಎಂದು ಅವರು ವಿವರಿಸಿದರು. ಕಳೆದ ಐದು ದಶಕಗಳಲ್ಲಿ, ಕಾರಿಥಾಸ್ ಮತ್ತು ಸ್ಥಳೀಯ ಧರ್ಮಸಭೆಗಳು ಈ ಕರುಣಾಭರಿತ ಕಾರ್ಯವನ್ನು ಕಾರ್ಯಗತ ಮಾಡಿಕೊಂಡು ಅದರ ಅನೇಕ ಮಹತ್ವದ ನಿರ್ಧಾರಗಳು ಸಹಾಯ ಮಾಡಿವೆ” ಎಂದು ವಿಶ್ವಗುರುಗಳು ಹೇಳಿದರು.


ಶುಭಸಂದೇಶದ ಮಾರ್ಗ

ನಂತರ ವಿಶ್ವಗುರು ಫ್ರಾನ್ಸಿಸ್ ರವರು ಎರಡನೇ ಅನಿವಾರ್ಯ ಮಾರ್ಗದ ಬಗ್ಗೆ ಚರ್ಚಿಸಿದರು: ಅದು ’ಶುಭಸಂದೇಶದ ಮಾರ್ಗ’. ಇದು ಗಟ್ಟಿಯಾದ ಆದರೆ ಆಕರ್ಷಕವಲ್ಲದ, ಪ್ರಸ್ತಾಪಿತ ಆದರೆ ಹೇರಿಕೆಯಲ್ಲದ ವಿನಮ್ರ ಪ್ರೀತಿಯ ಶೈಲಿಯನ್ನು ಸೂಚಿಸುತ್ತದೆ. "ಇದು ಕೃಪಾಭರಿತ ಪ್ರೀತಿಯ ಶೈಲಿಯಾಗಿದೆ, ಇದು ಯಾವುದೇ ರೀತಿಯ ಪ್ರತಿಫಲ ಬಯಸದ ಶೈಲಿಯಾಗಿದೆ. ಇದು ತಮ್ಮನ್ನೇ ನಮ್ಮ ಸೇವಕರಾಗಿಸಿಕೊಂಡ ಯೇಸುವಿನ ಅನುಕರಣೆಯ, ನಮ್ಮನೇ ಸದಾ ಲಭ್ಯವಾಗಿಸಿಕೊಳ್ಳುವ ಹಾಗೂ ಸೇವೆಯ ಶೈಲಿಯಾಗಿದೆ. ಇದನ್ನು ವಿವರಿಸುತ್ತಾ ವಿಶ್ವಗುರು ಫ್ರಾನ್ಸಿಸ್ "ದಾನವು ಎಲ್ಲರನ್ನೂ ಒಳಗೊಳ್ಳುವಂಥದ್ದು ಹಾಗೂ ಕೇವಲ ಪ್ರಾಪಂಚಿಕತೆಗೆ ಮಾತ್ರ ಸಂಬಂಧಿಸಿದ್ದಲ್ಲ, ಅಂತೆಯೇ ಕೇವಲ ಆಧ್ಯಾತ್ಮಿಕತೆಗೆ ಮಾತ್ರವೂ ಸಂಬಂಧಿಸಿದ್ದಲ್ಲ” ಎಂದರು. "ಯೇಸುವಿನ ರಕ್ಷಣಾಕಾರ್ಯವು ಇಡೀ ಮನುಷ್ಯನನ್ನು ಅಪ್ಪಿಕೊಳ್ಳುತ್ತದೆ" ಎಂದು ಅವರು ಹೇಳಿದರು.


“ಶುಭಸಂದೇಶವು ಪ್ರತಿಯೊಬ್ಬ ಬಡ ವ್ಯಕ್ತಿಯಲ್ಲೂ ಯೇಸು ಇದ್ದಾರೆ ಎಂಬುದನ್ನು ನಮಗೆ ತೋರಿಸಿಕೊಡುತ್ತದೆ” ಎಂದು ವಿಶ್ವಗುರುಗಳು ಹೇಳಿದರು. "ಮತ್ತೆ ಮತ್ತೆ ಕಾಣಿಸಿಕೊಳ್ಳುವ ಧರ್ಮಸಭೆಯ ಸ್ವ-ಉಲ್ಲೇಖದ ಪ್ರಲೋಭನೆಯಿಂದ ನಮ್ಮನ್ನೇ ಮುಕ್ತಗೊಳಿಸಿಕೊಳ್ಳವುದನ್ನು ನಾವು ಸದಾ ನೆನಪಿಟ್ಟುಕೊಳ್ಳುವುದು ಒಳ್ಳೆಯದು ಹಾಗೂ ಬಡವರು ಭಾಗ್ಯವಂತರಾಗುವ ಧ್ಯೇಯವೇ ಕೇಂದ್ರವಾಗಿರುವ, ಸೇವೆಯಲ್ಲೇ ಆನಂದ ಕಾಣುವ ಕೋಮಲ ಹಾಗೂ ನಿಕಟ ಸಂಬಂಧದ ಧರ್ಮಸಭೆ ನಮ್ಮದಾಗಬೇಕು.” ಎಂದರು.


ಸೃಜನಶೀಲತೆಯ ದಾರಿ

ತಮ್ಮ ಮಾತನ್ನು ಮುಂದುವರಿಸುತ್ತಾ ವಿಶ್ವಗುರುಗಳು ಸೂಚಿಸಿದ ಮೂರನೇಯ ಮಾರ್ಗ ’ಸೃಜನಶೀಲತೆಯ ಮಾರ್ಗವಾಗಿದೆ’. ಈ ಐವತ್ತು ವರ್ಷಗಳ ಶ್ರೀಮಂತ ಅನುಭವವು ಮತ್ತೆ ಮತ್ತೆ ಪುನರಾವರ್ತಿಸಬೇಕಾದ ವಸ್ತುಗಳ ಹೊರೆಯಲ್ಲ. ಸಂತ ಜಾನ್ ಪಾಲ್ ರವರ ದಾನದ ಕಲ್ಪನೆಯನ್ನು ಒಂದು ಸ್ಥಿರವಾದ ರೀತಿಯಲ್ಲಿ ನಿರಾಕರಿಸುತ್ತಾ ಹೊಸತನ್ನು ನಿರ್ಮಾಣ ಮಾಡಲು ಇದು ಆಧಾರವಾಗಿದೆ ಎಂದು ವಿಶ್ವಗುರುಗಳು ವಿವರಿಸಿದರು. ಸಭಯಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಾ, ಬೆಳೆಯುತ್ತಿರುವ ಹೊಸ ಬಡವರ ಸಂಖೆಯನ್ನು ಹಾಗೂ ಹೊಸ ಬಡತನದ ಸ್ವರೂಪವನ್ನು ಕಂಡು ನಿರುತ್ಸಾಹಗೊಳ್ಳದೆ, ಸೋದರತ್ವದ ಕನಸುಗಳನ್ನು ಬೆಳೆಸಿಕೊಳ್ಳಲು ಮುಂದುವರಿಸಲು ಹಾಗೂ ಭರವಸೆಯ ಸಂಕೇತಗಳಾಗಿರಲು ಕರೆ ನೀಡಿದರು.


ಕೃತಜ್ಞೆತೆಗಳು

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ವಿಶ್ವಗುರುಗಳು ಕಾರಿಥಾಸ್ ಇಟಲಿಯ ಸಿಬ್ಬಂದಿ, ಗುರುಗಳು ಮತ್ತು ಸ್ವಯಂಸೇವಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಾಂಕ್ರಾಮಿಕ ಸಮಯದಲ್ಲಿ ಅವರು ತಮ್ಮ ಇರಿವಿಕೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಾ "ಅನೇಕರ ಒಂಟಿತನ, ಸಂಕಟ ಮತ್ತು ಅಗತ್ಯಗಳನ್ನು ನಿವಾರಿಸಿದ್ದಾರೆ " ಎಂದು ಹೇಳಿದರು. ಯುವ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ, “ಯುವಕರು ಈ ಬದಲಾಗುತ್ತಿರುವ ಯುಗದ ಅತ್ಯಂತ ಅಶಕ್ತ ಬಲಿಪಶುಗಳಾದರೂ, ಅವರೇ ಯುಗದ ಬದಲಾವಣೆಯ ಸಾಮರ್ಥ್ಯವುಳ್ಳ ವಾಸ್ತುಶಿಲ್ಪಿಗಳಾಗಿದ್ದಾರೆ" ಎಂದು ಹೇಳಿದರು.


“ಕಾರಿಥಾಸ್ ಅನೇಕ ಯುವ ಜನರಿಗೆ ಸಹಾಯ ಮಾಡಬಲ್ಲ ಜೀವನ ವ್ಯಾಯಾಮ ಶಾಲೆ ಆಗಬಲ್ಲದು” ಎಂದು ವಿಶ್ವಗುರುಗಳು ಅಭಿಪ್ರಾಯಪಟ್ಟರು ಮತ್ತು “ಇದರಿಂದಲೇ ಕಾರಿಥಾಸ್ ತಾನು ಯುವತನದಿಂದಲೂ ಮತ್ತು ಸೃಜನಶೀಲವಾಗಿಯೂ, ಸರಳ ಮತ್ತು ನೇರತನವನ್ನು ಉಳಿಸಿಕೊಳ್ಳುತ್ತಾ, ಮಕ್ಕಳಂತೆ ನಿರ್ಭಯವಾಗಿ ಮೇಲಕ್ಕೆ ಮತ್ತು ಬೇರೆ ಕಡೆಗಳಿಗೆ ಮುಖ ಮಾಡುತ್ತದೆ"ಎಂದರು.


ಕನ್ನಡಕ್ಕೆ: ಪ್ರಶಾಂತ್ ಇಗ್ನೇಷಿಯಸ್


27 ಜೂನ್ 2021, 12:30

43 views0 comments

Kommentare


ADDRESS

Archbishop’s House

75 Millers Road,

Bengaluru – 560 046

Karnataka

India

JOIN THE ARCHDIOCESAN 
MAILING LIST
  • Grey Facebook Icon
  • Grey Instagram Icon

QUICK LINKS : CCBI | VATICAN

© 2024 ALL RIGHTS RESERVED ARCHDIOCESE OF BANGALORE (ARCHDIOCESAN COMMUNICATION CENTER) | DESIGNED BY WISE MEDIA 

bottom of page